Sunday 12 April 2015

ಅವಳ ಹೆಜ್ಜೆ, ಸಬಲೀಕರಣದ ಹಾದಿ ಮತ್ತು ಆಯ್ಕೆ……..


ಬಯಲ ಬೇಗೆಯಲ್ಲಿ ನಿಂತು ಕಿರುಚಾಡುವಾಗ, ಸುಳಿಯದೇ ಸುಳಿಯುವ ಆತ್ಮರತಿ, ತನ್ನದೇ ಅಂಗಳಕ್ಕಿಳಿಯುತ್ತಿದ್ದಂತೆ ಒಡಲ ದಿಕ್ಕನ್ನು ಅರಿವು ಮಾಡಿಕೊಡುವುದಿದ್ದರೆ ಅದು ಅವಳಿಗಷ್ಟೆ….
ಅವಳ ಆಯ್ಕೆಯನ್ನು ನಿರ್ಧರಿಸುವುದು ಯಾರು? ಅವಳೇ…. ಸದ್ದಿಲ್ಲದೇ, ದಿನಕ್ಕೊಂದು ರೂಪ ಪಡೆಯುತ್ತಿರುವ ಸಬಲೀಕರಣದ ಭ್ರೂಣ ಅವಳ ವ್ಯಕ್ತಿಗತ ಆಯ್ಕೆಯ ಅನುಸಾರವೇ ಬೆಳೆಯಬೇಕು. ಬೆಳೆಯುತ್ತಿದೆ ಎಂದನಿಸುತ್ತಿದೆಯೇ?. ಅಷ್ಟಕ್ಕೂ ಈ ಆಯ್ಕೆ ಎಂಬ ಪದವೇ ಬಹು ಸೋಜಿಗ. ಒಬ್ಬರ ಇಷ್ಟಾನಿಷ್ಟ ಮತ್ತೊಬ್ಬರ ಪಟ್ಟಿಯಲ್ಲಿ ಇಲ್ಲದೇ ಹೋಗಬಹುದು. ಮತ್ತೊಬ್ಬರಿಗೆ ಅದು ಆಯ್ಕೆಯಾಗದೇ ಇರಬಹುದು. ಅಂತಹುದ್ದರಲ್ಲಿ ಒಟ್ಟಂದದ ಸಾಮೂದಾಯಿಕ ನೆಲೆಯ ‘ಅವಳ’ ಸಬಲೀಕರಣವನ್ನು’ ಯಾರ ಆಯ್ಕೆ ನಿರ್ಧರಿಸುತ್ತದೆ?
ಇನ್ನೂ ಅವಳೆಂದರೆ… ಅವಳಷ್ಟೆಯೇ…. ಅವಳಲ್ಲಿಯೂ ನಾನಾ ತರಹ. ಮೇಲ್ಮಧ್ಯಮ, ಮಧ್ಯಮ, ಕೆಳ, ಶಿಕ್ಷಿತ, ಅಶಿಕ್ಷಿತ ಹೀಗೆ ನಾನಾ ವರ್ಗೀಕರಣ…ಇದೆಲ್ಲವೂ ಸಾಮಾಜಿಕ ಅಧ್ಯಯನದ ದೃಷ್ಟಿಯಿಂದ..ಇದರಾಚೆಗೆ ಅವಳು ಅವಳೇ. ಆ ಎಲ್ಲ ವ್ಯಕ್ತಿತ್ವವನ್ನು ಗೌರವಿಸುವ ಹಾಗೂ ಪ್ರೀತಿಸುವ ತಿರಸ್ಕರಿಸುವ ಹಕ್ಕು, ಆಯ್ಕೆ ಎಲ್ಲವೂ ಇವನಿಗಿದೆ. ಹಾಗೆಂದ ಮಾತ್ರಕ್ಕೆ ಅವಳು ಯಾರ ಕೈಗೊಂಬೆಯೂ ಅಲ್ಲ. ದೇಹಕ್ಕೂ, ಮನಸ್ಸಿಗೂ ಒಪ್ಪದ ರಾಶಿ ಮೌಲ್ಯಗಳನ್ನು ಅವಳ ಮೇಲೆ ಹೇರಿ, ನಿನ್ನದು ಭೂಮಿ ಸಹನೆ ಎಂಬ ತಥಾಕಥಿತ ಅತಿರೇಕದ ಹೊಗಳಿಕೆಯಿಂದ ಅವಳ ದೇಹ ಹಾಗೂ ಮನಸ್ಸಿನ ಆ ಕ್ಷಣದ ತುರ್ತನ್ನು, ಒಳತೋಟಿಯನ್ನು ನಿವಾರಿಸಲು ಸಾಧ್ಯವೇ?.
ಮೌಲ್ಯಗಳನ್ನು ಹೇರುವಾಗ ಮಾತ್ರ ಅವಳು ದೇವತೆಯಾಗಿಯೂ, ನಿರ್ಣಾಯಕ ಹಂತಗಳಲ್ಲಿ ಅವಳ ಸಾಮರ್ಥ್ಯ, ಕೌಶಲ, ಅಭಿಪ್ರಾಯಗಳನ್ನು ಕಡೆಗಣಿಸುವ ವೈರುಧ್ಯಗಳಲ್ಲಿ ಇವನದ್ದು ಸಂಪೂರ್ಣ ಸೋಲು ಎಂದೆನಿಸವುದಿಲ್ಲವೇ?
ಅನನ್ಯತೆ, ಅಂತಃಕರಣ, ಜೀವಪರತೆಯ ಅವಳ ಶಕ್ತಿಗೆ ಅವಳಷ್ಟೆ ಸಾಟಿ. ಪ್ರಕೃತಿಯ ನಿಗೂಢತ್ವಕ್ಕೆ ಹೋಲಿಸಿ ಸುಮ್ಮನಾಗಬೇಕಷ್ಟೆ.. ‘ಅವಳ’ ಅನನ್ಯತೆಯ ಮುಂದೆ ಎಲ್ಲ ಟೀಕೆಗಳು ಸಪ್ಪೆಯೇ. ಅನಾದಿ ಕಾಲದಿಂದಲೂ ನಡೆದ ಎಲ್ಲ ಆತ್ಮ ಹಾಗೂ ಭಾವ ವಾಗ್ವಾದಲ್ಲಿಯೂ, ಕಾವ್ಯ, ಕತೆ, ನಾಟಕದ ಎಲ್ಲ ಅನುಸಂಧಾನಗಳಲ್ಲೂ ಇದು ವ್ಯಕ್ತವಾಗುತ್ತಲೇ ಇದೆ. ಹಾಗಿದ್ದರೂ, ಅದನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಏನನ್ನೋಣ. ಅಥವಾ ಒಪ್ಪಿಕೊಳ್ಳದೇ ರಚ್ಚೆ ಹಿಡಿಯುತ್ತಿರುವ ಮನಸ್ಥಿತಿಯನ್ನು ಶಿಶು ಮನಸ್ಥಿತಿ ಎಂದು ಕ್ಷಮಿಸಿಬಿಡೋಣವೇ?, ಬಿಟ್ಟುಕೊಟ್ಟು ಬಿಡೋಣವೇ?
ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳೆಂಬ ಕತ್ತಿ ಅಲಗಿನ ನಡುವೆಯೂ ನಾಜೂಕಾಗಿ ನಡೆಯುವ ಅವಳೆಂಬ ಅವಳು ಬಿಟ್ಟಕೊಟ್ಟಿದ್ದೆಷ್ಟು, ಕ್ಷಮಿಸಿದೆಷ್ಟು…? “ನಾನು ನಿನ್ನಂತೆಯೇ ಆತ್ಮ .ಪ್ರತಿ ಸಲ ನಾನೇ ಏಕೆ ಬಿಟ್ಟುಕೊಡಲಿ, ಏಕೆ ಕ್ಷಮಿಸಬೇಕು, ಏಕೆ ಹೊಂದಿಕೊಬೇಕು” ಎಂಬ ಸಣ್ಣ ತಹತಹ ಅವಳಲ್ಲಿ ಹುಟ್ಟಿದರೆ, ಅವಳು ನನ್ನಂತೆಯೇ ಅಲ್ಲವೇ ಎಂದು ಇವನಿಗೇಕೆ ಅನಿಸದು? ಹಾಗೇ ಅನಿಸಿದಾಗಲೂ ಅವನೇಕೆ ಹೇಳನು? ಅನೂಕ್ಷಣ ಅವನ ಅಹಂನ ಬೆಂಕಿಗೆ ಇವಳೇ ಏಕೆ ಕರ್ಪೂರದಂತೆ ಕರಗಬೇಕು?
ಕ್ಷಮಿಸುತ್ತಾ , ಬಿಟ್ಟುಕೊಡುತ್ತಾ ಎಷ್ಟು ದಿನ ಕೂರಲು ಸಾಧ್ಯ. ಆಕೆಗೊಂದು ವೈಯಕ್ತಿಕ ಹಂಬಲವಿರಬಾರದೆ, ಈ ಬದುಕು ಕ್ಷಮಿಸುವುದರಲ್ಲಿಯೇ ಸವೆದು ಹೋಯಿತಲ್ಲ ಎಂಬ ಒಳಬೇಗುದಿಯೊಂದು ಹುಟ್ಟಿದರೆ, ರಿಪೇರಿಯಾಗದ ಸಂಬಂಧದಾಚೆಗೆ ಸಾಂತ್ವನವೋ, ಸಹಚರ್ಯೆಯೋ ಏರ್ಪಟ್ಟರೆ, ಏಕಪಕ್ಷೀಯವಾಗಿ ಜರೆದು ಬಿಡುವುದು ತರವೇ?. ನನ್ನಂತೆ ಅವನಿಗೂ ಬದ್ಧತೆ ಬೇಕು ಎಂದು ಅನಿಸುವುದು ತಪ್ಪಲ್ಲವಲ್ಲ. ಆದರೆ ಅವಳೆಂಬ ಒಂದೇ ಕಾರಣಕ್ಕೆ, ಮನೋವ್ಯಾಪಾರದ ವ್ಯಾಖ್ಯಾನವನ್ನು ಬೇಕಾದ ಹಾಗೇ ತಿರುಚುವುದು ಸರಿಯೆನಿಸುತ್ತದೆಯೇ?. ಯಾರೋ ಸಿದ್ಧಪಡಿಸಿದ ಭೂತದ ಕನ್ನಡಿಯಲ್ಲಿ ವರ್ತಮಾನದ ಅವಳು ಸಮರ್ಪಕವಾಗಿ ಕಾಣಬಲ್ಲಳೆ?
ಇನ್ನೂ ರಾಜಕೀಯ, ಸೈದ್ಧಾಂತಿಕ ವಿಚಾರದಲ್ಲಿ ಆಯ್ಕೆಗಳೇನೋ ಸರಿ. ಆದರೆ, ಹೇಳಿ ಕೇಳಿ ಸಂಬಂಧಗಳೇ ಬಹು ಸೂಕ್ಷ್ಮ. ಅವುಗಳಲ್ಲಿ ಆಯ್ಕೆ ಎನ್ನುವ ಪದವೇ ಸರಿಯಲ್ಲ. ಸಂಬಂಧವನ್ನು ಆಯ್ಕೆ ಮಾಡುವ ಹಕ್ಕು ಸ್ವಾತಂತ್ರ್ಯ ಇಬ್ಬರಿಗೂ ಇದೆ.. ಆದರೆ, ಅದರಲ್ಲಿ ಬದ್ಧತೆಯೆಂಬುದು ಕೂಡ ಇರಬೇಕಾಗುತ್ತದೆ. ಹಾಗಿಲ್ಲದೇ ಹೋದರೆ ಆಯ್ಕೆ ಪದ ಲೆಕ್ಕಚಾರದ ಮನಸ್ಥಿತಿಗೆ ತೀರಾ ಹತ್ತಿರವೆನಿಸಿಬಿಡುತ್ತದೆ. .
ಬದ್ಧತೆಯೇ ಮುಖ್ಯವಾದಾಗ ಉಳಿದೆಲ್ಲವೂ ಗೌಣವಾಗುತ್ತದೆ. ಆಯ್ಕೆ ಮೇಲೆ ನಿಂತದ್ದು, ಬಹುಕಾಲ ಬಾಳದು. ಆಯ್ಕೆಯನ್ನೇ ಮುಖ್ಯವಾಗಿಸುತ್ತಾ, ಅರಸುತ್ತಾ ಹೊರಟರೆ… ಇಷ್ಟಪಟ್ಟದ್ದನ್ನೇ ಧೇನಿಸಿ, ಹವಣಿಸಿ ಪಡೆಯುವುದರ ಸವಿ ಏನಿದೆ? ಪಡೆದ ಮೇಲೆ ಉಳಿಸಿಕೊಳ್ಳುವ ಹಂಬಲವಿಲ್ಲದೇ ಹೋದರೆ ಬದುಕು ಅತಿ ಕ್ಷಣಿಕ ಎಂದು ಅನಿಸುವುದಿಲ್ಲವೇ?. ಈ ಮಾತು ಇವನಿಗಾಗಲಿ, ಇವಳಿಗಾಗಲಿ ಒಂದೇ ಅಲ್ಲವೇ?
ಸಬಲೀಕರಣವೆಂಬ ಪದ ಅವಳ ದೇಹಕ್ಕಿಂತಲೂ ಮನಸ್ಸಿಗೆ ಸಂಬಂಧಿಸಿದ್ದು. ಈ ಸಬಲೀಕರಣವೆಂಬ ಪದವನ್ನು ಅವಕಾಶವಾದಿಗಳ, ಸ್ವಾರ್ಥಿಗಳ, ಬಿಟ್ಟಿ ಪ್ರಚಾರ ಬಯಸುವವರಿಂದ, ಯಾವ್ಯಾವೊದೋ ಸೋಗಿನಲ್ಲಿರುವವರಿಂದ ರಕ್ಷಿಸಬೇಕಿದೆ. ಹಾಗೇ ರಕ್ಷಿಸದೇ ಹೋದರೆ, ಬದುಕು, ಅಸ್ಮಿತೆ ಎಂದು ತುದಿಗಾಲಿನಲ್ಲಿ ನಿಂತು ದುಡಿಯುತ್ತಿರುವವಳ, ಎಲ್ಲ ನೋವ ನುಂಗಿ, ತುದಿ ಸೆರಗಿನಲ್ಲಿ, ಕಣ್ಣಹನಿಯ ಒರೆಸಿಕೊಂಡವಳ ಸಬಲೀಕರಣ, ಕ್ಲೀಷೆಯಾಗಿಯೂ, ನಗೆ,ಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚಲ್ಲವೇ?
ಇನ್ನೂ ಅವಳ ಶಕ್ತಿ, ಸಾಮರ್ಥ್ಯ ಅವಳಿಗೆ ತಿಳಿಯುವಂತೆ ಮಾಡುವ ಪ್ರಯತ್ನದಲ್ಲಿ ದಾಪುಗಾಲು ಇಡಬೇಕಿದೆ. ಅದರಲ್ಲೂ
ಕೆಳ ಹಾಗೂ ಮಧ್ಯಮ ವರ್ಗದಲ್ಲಿ ಬಹುದೊಡ್ಡ ಪರಿವರ್ತನೆ ಮಾಡಬೇಕಿದೆ. ಇದು ಅವನ ಬೆಂಬಲವಿಲ್ಲದೇ ಅಸಾಧ್ಯ. ಪರಂಪರೆಯ ಲೆಕ್ಕಚಾರದಲ್ಲಿ ಅವಳ ಮೇಲೆ ಬರೀ ಆದರ್ಶಗಳನ್ನಷ್ಟೇ ಹೇರಿದರೆ, ಪ್ರಾಯೋಗಿಕವಾಗಿ ಆಕೆ ಬದುಕು ಕಂಡುಕೊಳ್ಳುವುದಾದರೂ ಹೇಗೆ? ದೇಶಕ್ಕೆ ಸ್ವಾತಂತ್ರ್ಯ ಬಂದು 60ವರ್ಷಗಳೇ ಕಳೆದಿವೆ. ಹೀಗಿದ್ದೂ ಅವಳು ಇನ್ನೂ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಗಳನ್ನೇ ಸಾಧಿಸಲು ಸಾಧ್ಯವಾಗದೇ ಇರುವಾಗ, ನನ್ನಾಯ್ಕೆ ಎಂಬ ಬೀಸು ಹೇಳಿಕೆ ಅವಳ ಅಂತಃಸತ್ವಕ್ಕೆ ಮಾರ್ಗದರ್ಶನ ಮಾಡಬಲ್ಲದೆಯೇ?
ಬೌದ್ಧಿಕ, ಸೈದ್ದಾಂತಿಕ, ಪಕ್ಷ ಒತ್ತಟ್ಟಿಗಿರಲಿ, ಕನಿಷ್ಠ ಕೂಲಿ ಪ್ರಜ್ಞೆಯೂ ಇಲ್ಲದೇ ದುಡಿಯುತ್ತಿರುವ ಮಧ್ಯಮ ಹಾಗೂ ಕೆಳವರ್ಗದ ಅವಳ ಬದುಕಿಗೆ ಯಾವ ಆಯ್ಕೆಯಿದೆ?. ಹಾಗೆಯೇ ಮಧ್ಯಮ ವರ್ಗದ ಅವಳು ಬದುಕನ್ನು ಮಟ್ಟಸಗೊಳಿಸುವ, ಒಪ್ಪ ಓರಣಗೊಳಿಸುವ, ಕುಟುಂಬವನ್ನು ಪೋಷಿಸುವ ಆಯ್ಕೆಯಲ್ಲಿ ಅವಳಿಲ್ಲದೇ ಹೋಗಬಹುದು. ಆದರೆ ಅವಳ ಅನನ್ಯತೆ?
ಅವಳ ದೇಹ, ಅವಳ ಬದುಕು ಅದು ಅವಳದ್ದೇ. ಇದನ್ನೇ ಅಲ್ಲವೇ “ಮೈ ಚಾಯ್ಸ್’ ಎಂಬ ವಿಡಿಯೋದಲ್ಲಿ ನಟಿ ದೀಪಿಕಾ ಕೂಡ ಹೇಳಿದ್ದು. ಆದರೆ ಆಕೆ ಹೇಳದೇ ಉಳಿದ ಬಹುದೊಡ್ಡ ಮಾತೆಂದರೆ…. ಅವಳ ದೇಹ, ಅವಳು ಬದುಕು ಎಲ್ಲವೂ ಅವಳದ್ದೇ. ಆದರೆ ಅದು ಬಿಕರಿಗಿಟ್ಟ ವಸ್ತುವಲ್ಲ. . ಬಿಕಾರಿಗಳಿಗೆ ಹಣ ಮಾಡಲು ಇರುವ ಬಂಡವಾಳವೂ ಅಲ್ಲ. ಇದನ್ನ ದೀಪಿಕಾ ಎಂಬ ನಟಿ ಹೇಳಲು ಮರೆತಿದ್ದಾಳೆ. ಹೇಳುವ ವೇದಿಕೆಯೂ ಅದಲ್ಲವಲ್ಲ. ಹೇಳುವ ಸ್ವಾತಂತ್ರ್ಯವೂ ಆಕೆಗಿಲ್ಲ. ಏಕೆಂದರೆ ಆ ವಿಡಿಯೊ, ಜಾಹೀರಾತಿನ ಒಂದು ತುಣುಕಿನಂತೆ. ಇನ್ನೂ ಜಾಹೀರಾತು ಕ್ಷೇತ್ರ ಭೋಗ ಸಂಸ್ಕೃತಿಯ ಮೇಲೆ ನಿಂತಿದೆ.
ವಿಡಿಯೋದಲ್ಲಿ ಹೇಳಿರುವಂತೆ: ದೇಹವನ್ನು ಜಿರೋ ಸೈಜ್ ಗೋ, ಅಥವಾ ಇನ್ನಾವೊದೋ ಸೈಜೊಗೋ ತರುವುದು ಅವಳ ಇಷ್ಟ. ಈ ಒಂದು ಅಂಶದಲ್ಲಿಯಾದರೂ ಅದನ್ನು ಪ್ರತಿಪಾದಿಸಿದ ದೀಪಿಕಾಗೆ ಆಯ್ಕೆಯಿದೆಯೇ? ಖಂಡಿತಾ ಇಲ್ಲ.. ಮುಂದಿನ ಸಿನಿಮಾಗಳಲ್ಲಿ ಸಿಗುವ ಪಾತ್ರದ ಆಧಾರದ ಮೇಲೆ ಆಕೆಯ ದೇಹದ ತೂಕ ನಿರ್ಧಾರವಾಗುತ್ತದೆ. ಅದು ನಿರ್ದೇಶನಕನೊಬ್ಬ ಅಣತಿಯ ಮೇರೆಗೆ!
ಯಕಃಶ್ಚಿತ್ ಎರಡೂವರೆ ನಿಮಿಷದ ವಿಡಿಯೋದಿಂದಲೋ, ಗೊಡ್ಡು ಭಾಷಣದಿಂದಲೋ, ಕ್ಯಾಮೆರಾದ ಮುಂದಿನ ‘ನಾಟಕದಿಂದಲೋ’ ಮಹಿಳಾ ಸಬಲೀಕರಣ ಸಾಧ್ಯವಿಲ್ಲ. ಅದು ನಿಂತ ನೆಲದಲ್ಲೇ ಆಗಿ ಬಿಡುವ ಕ್ರಿಯೆಯೂ ಅಲ್ಲ. ಸಬಲೀಕರಣಕ್ಕಾಗಿ ತುಡಿಯುವ ಸಾವಿರಾರು ಚೇತನಗಳು ತಾವು ಸಾಗುತ್ತ. ಇತರರ ಹೆಜ್ಜೆಗೂ ಅವಕಾಶ ಕೊಡುತ್ತಾ ಅವಳ ದಾರಿಯನ್ನು ಸುಗಮಗೊಳಿಸುವುದಾಗಿದೆ.
ಆಯ್ಕೆಯ ದನಿ ಎಲ್ಲರಿಗೂ ಇರಬೇಕು. ಆದರೆ ಅದನ್ನು ಎಂತಹ ಸನ್ನಿವೇಶದಲ್ಲಿ ಏರಿಸಬೇಕು ಎಂಬ ಕನಿಷ್ಠ ಪ್ರಜ್ಞೆ, ವಿವೇಕವಿಲ್ಲದೇ ಹೋದರೆ ಯಾವ ಸ್ವಾತಂತ್ರ್ಯವೂ ಅವಳನ್ನು ಕಾಪಾಡದು.
ಆಧುನೀಕತೆಯೆಂಬುದು ಉಟ್ಟ ಉಡುಗೆಯಲ್ಲಿ ಇಲ್ಲ. ನೆಟ್ಟ ದೃಷ್ಟಿಯಲ್ಲಿರುತ್ತದೆ. ಮುಕ್ತತೆ ಲೈಂಗಿಕತೆಗಷ್ಟೆ ಸಂಬಂಧಿಸಿದ್ದಾಗಿರಬೇಕಿಲ್ಲ. ಮೂರು ಕಾಸಿನವರು ಹೇರಿದ ತಥಾಕಥಿತ ಮೌಲ್ಯಗಳಿಂದ ಅವಳು ಸದ್ಯ ಮುಕ್ತಳಾಗಬೇಕಿದೆ. ಸುಳಿವಾತ್ಮ ಗಂಡೂ, ಅಲ್ಲ ಹೆಣ್ಣೂ ಅಲ್ಲ ಎಂಬುದು ಅವನಂತೆಯೇ, ಅವಳಲ್ಲೂ ಬಿತ್ತಬೇಕಿದೆ.. ಇಡೀ ಜನಸಂಖ್ಯೆಯ ಅರ್ಧದಷ್ಟಿರುವ ಅವಳು ವೈಯಕ್ತಿಕ ಮೌಲ್ಯವನ್ನು ಪ್ರತಿಪಾದಿಸುವಷ್ಟು ತಾಕತ್ತು ಹೊಂದಿದ್ದಾಳೆ. ಈ ನೆಲದ ಅಭಿವೃದ್ಧಿಗೆ ಅವಳ ಶಕ್ತಿ ಸಾಮರ್ಥ್ಯ, ಕೌಶಲವನ್ನು ಬಳಸಿಕೊಳ್ಳುವ ತುರ್ತಿದೆ ಎಂದು ಅನಿಸಿ, ಕಾರ್ಯರೂಪಕ್ಕೆ ಬಂದಾಗಷ್ಟೆ ಅವಳ ಸಬಲೀಕರಣ. ಈ ನೆಲದ ಉದ್ಧಾರ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯ,
ಅವಳ ಅಂತಃಸತ್ವ, ಅನನ್ಯತೆ, ಅವಳ ವ್ಯಕ್ತಿತ್ವ ಅವಳದ್ದು. ಅದನ್ನು ಪ್ರತಿಪಾದಿಸಲು ಯಾವ ವಾದದ ಊರುಗೋಲು ಬೇಡ. ಪರಂಪರೆ ಹೇರಿರುವಂತೆ, ಪ್ರಗತಿಪರ ದೃಷ್ಟಿಕೋನವು ಒಂದಷ್ಟು ಇಲ್ಲದ ಸಲ್ಲದ, ವ್ಯಾಖ್ಯಾನವನ್ನು ಅವಳ ಮೇಲೆ ಹೇರಿದೆ. ಪೂರ್ವ ಮತ್ತು ಪಶ್ಚಿಮಗಳಾಚೆಗೆ ಇರುವ ಅವಳ ಸಂಕಟ ದೊಡ್ಡದು. ಇರುವ ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸುವ ಅವಳ ಚಾಕಚಕ್ಯತೆಯೇ ಅವಳ ಆಸ್ತಿ. ಅವಳ ಅನನ್ಯತೆಯೇ ಅವಳನ್ನು ಕೈಹಿಡಿದು ಮುನ್ನಡೆಸುತ್ತದೆ.
ಆದರೆ, ಅವಳು ಮತ್ತು ಅವನ ಸಾಂಗತ್ಯ, ಪರಸ್ಪರ ಸಹಕಾರ ಇವೆಲ್ಲದಕ್ಕೂ ಮೀರಿದ್ದು, ಪದಗಳಿಗೂ ನಿಲುಕದ್ದು......