Saturday 7 March 2015

ಹೆಣ್ಣೆಂಬ ಆತ್ಮದ ಅಂತರ್ದೃಷ್ಟಿ.....






ಅರುಣಿಮಾ ಸಿನ್ಹಾ

 ಆಕೆಯ  ಕಣ್ಣುಗಳಲ್ಲಿ ಅಡಗಿದ್ದ ಕಿಡಿ, ಹೋರಾಟದ ಕೆಚ್ಚು. ಅವು ಮಾತಾಗಿ ಹೊಮ್ಮಿ, ಕೇಳುಗರ ಎದೆಯಲ್ಲಿ ಹಣತೆಯೊಂದನ್ನು ಬೆಳಗಿದರೆ ಆಶ್ಚರ್ಯವಿಲ್ಲ. ಸಾಧನೆಗೆ ಯಾವುದೇ ಮಿತಿಯಿಲ್ಲ. ಮನಸ್ಸಿಗೆ ಹಾಕಿಕೊಂಡ ಮಿತಿಗಳನ್ನ ಆಯಾ ಕಾಲಕ್ಕೆ ತಕ್ಕಂತೆ ಕೊಡವಿಕೊಳ್ಳಬೇಕು. ಹಾಗೇ ಕೊಡವಿಕೊಳ್ಳುವುದು ಬದುಕುವ ಮಾರ್ಗಗಳಲ್ಲಿ ಒಂದು ಎಂಬುದನ್ನು ತೋರಿಸಿಕೊಟ್ಟವರಲ್ಲಿ ಹಲವರಿದ್ದಾರೆ. ಆದರೆ, ಈಕೆ ಆರಿಸಿಕೊಂಡಿದ್ದು ಮಾತ್ರ ದುರ್ಗಮದ ಹಾದಿ. ಸೃಷ್ಟಿಸಿಕೊಂಡಿದ್ದು, ಅನುಕ್ಷಣವೂ ಆತ್ಮಬಲವನ್ನು ಕುಗ್ಗಲು ಬಿಡದೇ, ಮುನ್ನಡೆಯಬೇಕಾದ ತುರ್ತು. ಮನಸ್ಸು ಅರಳಲು ತುರ್ತೊಂದು ಹುಟ್ಟದೇ ಹೋದರೆ, ಅದು ಮಿತಿಯಲ್ಲಿಯೇ ಉಳಿದು ಹೋಗುವ ಆತಂಕವನ್ನು ಉಳಿಸಿಕೊಂಡು ಬಿಡುತ್ತದೆ.
ಬದುಕಿನುದ್ದಕ್ಕೂ ಬರುವ ಸಮಸ್ಯೆಗಳನ್ನೆಲ್ಲ ಅವಕಾಶಗಳಾಗಿ  ಪರಿವರ್ತಿಸಿಕೊಳ್ಳಬೇಕು. ಇಂದಿನ ದಿನ ಟೀಕಿಸಿದವರಿಗೆ ಮೀಸಲಾದರೆ, ನಾಳಿನ ದಿನವನ್ನು ಸಾಧಿಸಿ ತೋರಿಸುವ ವೇದಿಕೆಯಾಗಿ ರೂಪಿಸಿಕೊಳ್ಳಬೇಕು’...
ದೇಶಾವರಿ ನಗು, ಮಾತು ಎಲ್ಲ ಮುಗಿದ ಮೇಲೆ, ಆಕೆ ತನ್ನ ಆತ್ಮವೃತ್ತಾಂತಕ್ಕೆ ತೆರೆದುಕೊಳ್ಳುವ ಮೊದಲು ಓಂಕಾರದಂತೆ ಈ ನುಡಿಗಳನ್ನಾಡಿದರು.
ಆಕೆ ಆಡಿದ್ದೆಲ್ಲ ಸರಳ ಹಾಗೂ ಉತ್ಸಾಹಭರಿತ ಮಾತುಗಳು. ಆದರೆ ಅದರ ಹಿಂದೆ ಅಡಗಿದ್ದ ಅನುಭವದ ಹಾದಿ ಮತ್ತು ಆಕೆ ಅದನ್ನು ಸವೆಸಿದ ರೀತಿ ಮಾತ್ರ ನನ್ನನ್ನು ಚಕಿತ ಪಡಿಸಿದೆ..
ಹೀಗೆ ಮಾತಿಗೆ ಕೂತವರು ಬೇರಾರೂ ಅಲ್ಲ. ಮೌಂಟ್ಎವರೆಸ್ಟ್ಶಿಖರವೇರಿದ 26ರ ಹರೆಯದ  ವಿಶ್ವದ ಮೊದಲ ಅಂಗವಿಕಲ ಮಹಿಳೆ ಅರುಣಿಮಾ ಸಿನ್ಹಾ.
ನಮ್ಮ ಬದುಕಿಗೆ ನಾವೇ ಪ್ರೇರಕರು. ಅಂತರಾತ್ಮ ಜಾಗೃತಗೊಂಡರೆ ಮಾತ್ರ  ನಿಚ್ಚಳಗೊಂಡಿರುವ ಬದುಕಿನ ಗುರಿಯನ್ನು ಅನಾಯಾಸವಾಗಿ ತಲುಪಲು ಸಾಧ್ಯ. ಟೀಕಿಸಿದವರನ್ನು, ಜರಿದವರನ್ನು ತುಂಬು ಮನಸ್ಸಿನಿಂದ ಸ್ಮರಿಸಿಕೊಳ್ಳುತ್ತೇನೆ. ಅವರಾಡಿದ ಮಾತುಗಳಿಂದ ಛಲ ಪಡೆದು ಎವರೆಸ್ಟ್ಏರಿದ್ದೇನೆ ಎನ್ನುತ್ತ್ತಲೇ ತನ್ನ ಕತೆಯನ್ನು ಹೇಳಲು ಮುಂದಾದರು.
ದುರಂತಧ್ಯಾಯ:
ಯಾವ ಹಂತದಲ್ಲಿಯಾದರೂ ಬದುಕಿನಲ್ಲಿ ದುರಂತ ಧುತ್ತನೆ ಎದುರಾಗಬಹುದು. 2011 ಒಂದು ಮಧ್ಯರಾತ್ರಿ ಲಕ್ನೊದಿಂದ ದೆಹಲಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಕಳ್ಳರು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದಿಯಲು ಯತ್ನಿಸಿದರು. ವಿರೋಧಿಸಿದಾಗ, ರೈಲಿನಿಂದಲೇ ದೂಡಿದರು. ಪಕ್ಕದ ಹಳಿಗೆ ಬಿದ್ದ  ನನ್ನ ಮೇಲೆ ಮತ್ತೊಂದು ರೈಲು ಹರಿದು ಹೋಗಿತ್ತು. ನನ್ನ ಎಡಗಾಲು ಸಂಪೂರ್ಣ ಕಡಿದು ನನ್ನ ಕಣ್ಮುಂದೆ ಬಿದ್ದಿತ್ತು. ನನ್ನ ಪಾದಗಳನ್ನು ಹೆಗ್ಗಣಗಳು ತಿನ್ನಲು ಪ್ರಯತ್ನಿಸುತ್ತಿದ್ದವು. ಸುಮಾರು 7 ಗಂಟೆಗಳ ಕಾಲ ಹಾಗೇ ರೈಲು  ಹಳಿಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದೆ .
ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಅನಸ್ತೇಷಿಯಾದ ಸೌಲಭ್ಯವಿರಲಿಲ್ಲ. ಜೀವನ್ಮರಣದ ಹೋರಾಟದಲ್ಲಿದ್ದ ನನಗೆ ಬದುಕುವುದು ಅಗತ್ಯವಾಗಿತ್ತು. ಹಾಗಾಗಿ ಅನಸ್ತೇಷಿಯಾವಿಲ್ಲದಿದ್ದರೂ, ಶಸ್ತ್ರಚಿಕಿತ್ಸೆ ನಡೆಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದೆ. ಏಳು ಗಂಟೆಗಳ ಕಾಲವೇ  ನೋವಲ್ಲಿದ್ದ ನನಗೆ ಪ್ರಜ್ಞಾವಸ್ಥೆಯಲ್ಲಿಯೇ ಶಸ್ತ್ರಚಿಕಿತ್ಸೆಯ ನೋವು ಭರಿಸುವುದು ಕಷ್ಟವೆನಿಸಲಿಲ್ಲ. ಆಸ್ಪತ್ರೆಯಲ್ಲಿ  ಚೇತರಿಸಿಕೊಳ್ಳುತ್ತಿರುವಾಗಲೇ ನನ್ನ ಬದುಕು ಸಂಪೂರ್ಣ ಮುಗಿಯಿತು ಎನ್ನುವ ನೋವು ತೀವ್ರವಾಗಿ ಕಾಡಿತು.
ಕಾಲೇಜು ದಿನಗಳಲ್ಲಿ ಉತ್ತಮ ಅಥ್ಲೀಟ್ ಆಗಿದ್ದ ನನಗೆ  ಕಾಲು ಕಳೆದುಕೊಂಡು ಕುಂಟಿಯಾಗುವ ದುರದೃಷ್ಟ ಎದುರಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸುವ ದೃಢ ಮನಸ್ಸು ಬೆಳೆಯಿತು. ಮನಸ್ಸಿನ ಸಾಮುಗೆ ನೋವು ಉತ್ತಮ ಆಯ್ಕೆ.
ನನಗೆ ಮೂರು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡೆ. ತಾಯಿಯ ಆಶ್ರಯದಲ್ಲಿಯೇ ಬೆಳೆದೆ. ಆಸ್ಪತ್ರೆಯಲ್ಲಿ ಸರಿಯಾಗಿ ನಿಲ್ಲಲು ಆಗದೇ ಕುಂಟುತ್ತಿದ್ದ ನನ್ನನ್ನು ಕಂಡು ಬಂಧು- ಬಾಂಧವರು ನಕ್ಕರು.  ಟಿಕೆಟ್ಪಡೆಯದೇ ಇದ್ದುದ್ದರಿಂದ ರೈಲಿನಿಂದ ಹಾರಿಕೊಂಡಳು, ಇದು ಆತ್ಮಹತ್ಯೆಯ ಪ್ರಯತ್ನ ಎಂಬ ಉಹಾಪೋಹಗಳನ್ನು ಹುಟ್ಟಿಸಿದರು. ಇಂತಹ ನೂರಾರು ಕಟುನುಡಿಗಳು, ವ್ಯಂಗ್ಯದ ಮಾತುಗಳು ನನ್ನನ್ನು ಮತ್ತಷ್ಟು ಧೀರಳನ್ನಾಗಿಯೇ ಮಾಡಿತು.
ಏನಾದರೂ ಆಗಲಿ. ಕಾಲಿಲ್ಲದ ಕುಂಟಿಯೊಬ್ಬಳು ಜೀವನದಲ್ಲಿ ಬಹುದೊಡ್ಡ ಸವಾಲನ್ನು ಸ್ವೀಕರಿಸಬೇಕು. ಅದು ಇತರರಿಗೆ ಸ್ಫೂರ್ತಿಯಾಗಬೇಕು ಎಂಬ ಆಲೋಚನೆ ಬಂತು. ಅದಕ್ಕಾಗಿ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಸಾಹಸಕ್ಕೆ ಮುಂದಾದೆ. ಇದೇ ನನ್ನ ಗುರಿ ಎಂದು ಸ್ವಯಂ ಘೋಷಿಸಿಕೊಂಡೆ. ಸರಿಯಾಗಿ ನಡೆಯಲು ಆಗದವರು ಎವರೆಸ್ಟ್ ಏರುವುದೇ? ಎಂದು ಕೆಲವರು ನಕ್ಕರು. ಕೆಲವರೂ ತಲೆಗೂ ಪೆಟ್ಟುಬಿದ್ದಿರಬೇಕು ಎಂದು ಕುಹಕವಾಡಿದರು.
ಆಸ್ಪತ್ರೆಯಲ್ಲಿದ್ದುಕೊಂಡೇ ಮೌಂಟ್ ಎವರೆಸ್ಟ್ಏರಿದ ಮೊದಲ ಮಹಿಳೆ ಬಚೇಂದ್ರಿ ಪಾಲ್ ಅವರನ್ನು ಸಂಪರ್ಕಿಸಿ, ಅವರಿಂದ ತರಬೇತಿ ಪಡೆಯಲು ಅನುಮತಿಯನ್ನು ಪಡೆದೆ. ಕೃತಕ ಕಾಲು ಹಾಕಿಕೊಂಡು ಎವರೆಸ್ಟ್ ಏರಿದೆ.
ಎವರೆಸ್ಟ್ಏರಿದ ದಿನಗಳು
ಶಿಖರ ಏರುತ್ತಿದ್ದಂತೆ ಜತೆಗಿದ್ದ ಪರ್ವತಾರೋಹಿಗಳು ಹಿಂದೆ ಸರಿದರು. ಮೇಲಕ್ಕೆ ಹೋಗುತ್ತಿದ್ದಂತೆ ಚಳಿಯ ಪ್ರಖರತೆ ಇನ್ನಷ್ಟು ಹೆಚ್ಚುಗೊಂಡಿತು.  ಎತ್ತ ನೋಡಿದರೂ, ಮಂಜು ಹಾಗೂ ಹೆಣದ ರಾಶಿಯೇ ಕಂಡುಬರುತ್ತಿತ್ತು. ನನ್ನ ಜತೆ ನಾಲ್ಕು ಮಂದಿ ಶೆರ್ಪಾಗಳಿದ್ದರು. ಅವರೂ ಕೂಡ ಹಿಂದೆ ಸರಿದರು.  ಮೇಲಕ್ಕೆ ಹೋದಂತೆ ಕಾಲುಗಳು ಜಾರಲು ಆರಂಭಿಸಿದವು.  ಬೇಸ್ಕ್ಯಾಂಪ್ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದೆ. ಹಾಗಾಗಿ ನಾನು ಯಶಸ್ವಿ ಪರ್ವತಾರೋಹಿಯಾಗಲು ಸಾಧ್ಯವಾಯಿತು.
ಶಿಖರದಲ್ಲೂ ಸಾವಿನ ವಲಯವಿತ್ತುಇದೇ ಹಂತದಲ್ಲಿ ಆಮ್ಲಜನಕ ಪೂರೈಕೆಯ ಬಾಟಲಿಯೂ ಖಾಲಿಯಾಗುವ ಹಂತಕ್ಕೆ ಬಂದಿತ್ತು. ದೂರದಲ್ಲಿ ಒಬ್ಬ ಬಾಂಗ್ಲದೇಶಿ ಪರ್ವತಾರೋಹಿ ಸಾಯುವುದನ್ನ ಕಣ್ಣಾರೆ ಕಂಡೆ. ಶೆರ್ಪಾಗಳು ವಾಪಸ್ಸು ಹೋಗೋಣವೆಂದರೂ. ಹಳಿಗಳ ಮೇಲೆ 7 ಗಂಟೆಗಳ ರಕ್ತದ ಮಡುವಿನಲ್ಲಿ ಬಿದ್ದಾಗಲೇ ಸಾವು ನನ್ನ ಹತ್ತಿರ ಸುಳಿಯಲಿಲ್ಲ. ಈಗ ಸಾಯವುದಿಲ್ಲ. ಹೇಗಾದರೂ ಮಾಡಿ ಶಿಖರವೇರುವ ದೃಢನಿಶ್ಚಯ ಜತೆಗಿತ್ತು.  ಶಿಖರವೇರಿ ರಾಷ್ಟ್ರದ ಧ್ವಜ ನೆಟ್ಟ ಸಂದರ್ಭ ಬದುಕಿನ ಅವಿಸ್ಮರಣೀಯ ಗಳಿಗೆಯಲ್ಲ ಒಂದು.
ಸಂದರ್ಭದಲ್ಲಿ ರೈಲಿನಿಂದ ದೂಡಿದ ದುಷ್ಕರ್ಮಿಗಳನ್ನು ನೆನಪಿಸಿಕೊಂಡೆ. ಅವರ ದುಷ್ಕೃತ್ಯದಿಂದ ಬದುಕು ವಿಭಿನ್ನ ಹಾದಿಗೆ ಹೋಯಿತ್ತು. ಅವರಿಗೂ ಒಳ್ಳೆಯ ಕೆಲಸ ಮಾಡುವಂತೆ ಪ್ರೇರಣೆ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ದುಷ್ಕೃತ ಜರುಗದಿದ್ದರೆ, ಬಹುಶಃ ನಾನು ಪರ್ವತಾರೋಹಿಯಾಗುತ್ತಿರಲಿಲ್ಲ. ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
ಯುವ ಜನರು ಗುರಿಯನ್ನು ದೃಢನಿಶ್ಚಯ ಮಾಡಿಕೊಳ್ಳಬೇಕು. ಅದರೆಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಜೀವಿಸುವ ಛಲವಿದ್ದವರಿಗೆ ಮಾತ್ರ ಅದೃಷ್ಟ ಬೆಂಬಲ ನೀಡುತ್ತದೆ. ಸವಾಲಿಗೆ ಎದೆಯೊಡ್ಡಿಕೊಳ್ಳದಿರುವುದೇ ದೊಡ್ಡ ಅಪಾಯ. ಬದುಕಿನಲ್ಲಿ ಸಂಘರ್ಷವಿದ್ದಾಗಷ್ಟೇ ಏನಾನ್ನದರೂ ಸಾಧಿಸಲು ಸಾಧ್ಯ. ನನಗೆ ಸ್ವಾಮಿ ವಿವೇಕಾನಂದ ನುಡಿಗಳೇ ಸ್ಫೂರ್ತಿ.
ಸದ್ಯ  ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ  ಅಜಾದ್ ಅವರ ಹೆಸರಿನಲ್ಲಿ ವಿಕಲಾಂಗ ಖೇಲ್ ಅಕಾಡೆಮಿಯ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಮೇ 21ರಂದು ಶಿಲಾನ್ಯಾಸ ಕೂಡ ನಡೆಯಲಿದೆ. ಇಪ್ಪತ್ತು ಎಕರೆ ಭೂ ಪ್ರದೇಶದಲ್ಲಿ, ಅಥ್ಲೀಟ್ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯಿರುವ ಅಕಾಡೆಮಿ ಇದಾಗಲಿದ್ದು, ಅಂಗವಿಕಲ ಮಕ್ಕಳ ಕ್ರೀಡಾಸಕ್ತಿಯನ್ನು ಪೋಷಿಸುವ ದಿಸೆಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ.
ಸುಮಾರು ₨25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಅಕಾಡೆಮಿಯಲ್ಲಿ  ಮಕ್ಕಳಿಗೆ ಶಿಕ್ಷಣ, ಸಾಹಸ ಹಾಗೂ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಲು ಮುಂದಾಗಿದ್ದೇನೆ.  ಈಗಾಗಲೇ ಅಕಾಡೆಮಿಯ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ.  ಕ್ರೀಡಾ ಸಚಿವರ ಸಹಾಯವನ್ನು ಕೂಡ ಅಪೇಕ್ಷಿಸಲಾಗಿದೆ. ಜೈಪುರ ಕೃತಕ ಕಾಲು ಜೋಡಣೆ ಕಂಪೆನಿಯ ಕೃತಕ ಕಾಲುಗಳ ಗುಣಮಟ್ಟ ವಿಕಲಾಂಗ ಕ್ರೀಡಾಳುಗಳ ಸಾಮರ್ಥ್ಯಕ್ಕೆ ಸರಿಹೊಂದುವುದಿಲ್ಲ. ಹಾಗಾಗಿ ಅಕಾಡೆಮಿಯಲ್ಲಿ ಕೃತಕ ಕಾಲು ಜೋಡಣೆಗೆ ಸಂಬಂಧಪಟ್ಟ ಸಂಶೋಧನಾ ಕೇಂದ್ರವನ್ನು ತೆರೆಯುವ ಉದ್ದೇಶವೂ ಇದೆ
ಆಕೆ ಒಂದೇ ಉಸಿರನಲ್ಲಿ ತನ್ನ ಕತೆಯನ್ನು ಅರುಹಿದರು. ಅವರ ಒಂದೊಂದು ಮಾತು ಆತ್ಮಬಲವನ್ನು ಹೆಚ್ಚಿಸುವಂತದ್ದೆ. ಅರುಣಿಮಾರಂತಹ ನೂರಾರು ಸಾಧಕಿಯರು ಈ ನೆಲದ ಬನಿಯಾಗಿ ಉಳಿದಿದ್ದಾರೆ. ಸಾಹಸ, ಕ್ರೀಡಾ ಚಟುವಟಿಕೆಗಳು ದೈಹಿಕವಷ್ಟೇ ಅಲ್ಲ ಮಾನಸಿಕವಾಗಿಯೂ ಹೆಣ್ಣನ್ನು ಸದೃಢಗೊಳಿಸುತ್ತದೆ.
ಎಲ್ಲಿಯದೋ ಮಾಮರ, ಎಲ್ಲಿಯದೋ ಕೋಗಿಲೆ:
ಕ್ರೀಡೆ ಹೆಣ್ಣಿನ ಕೋಮಲತನವನ್ನು ಹಾಳುಗೆಡವುತ್ತದೆ. ಹಾರಿದರೆ, ಜಿಗಿದರೆ ಎಲ್ಲಿ ಮನೆಯ ಮಗಳು ಗಂಡುಬೀರಿ ಪಟ್ಟ ಗಿಟ್ಟಿಸಿಕೊಂಡು ಬಿಡುತ್ತಾಳೋ ಎಂದು ಆತಂಕ ಪಡುವ ಪೋಷಕರು,  ಏರುದನಿಯಲ್ಲಿ ಮಾತನಾಡಿ, ಸಂವೇದನೆ ವ್ಯಕ್ತಪಡಿಸಿದಾಕ್ಷಣ ಸ್ತ್ರೀವಾದಿಯೇ ಇರಬೇಕು ಎಂದು ಗುಮಾನಿಸುವವರು, ಹೆಣ್ಣೆಂದರೆ ಬರೀ ಭಾವುಕ ಎಂದು ನಿರ್ಭಾವುಕರಾಗಿ ತೀರ್ಪು ನೀಡುವವರು ಅರುಣಿಮಾಳನ್ನು ಮತ್ತೊಮ್ಮೆ ಕಣ್ಬಿಟ್ಟು ನೋಡಬೇಕು.
 ಬೇಜವಾಬ್ದಾರಿ ಗಂಡನೊಂದಿಗೆ ಏಗಲು ಆಗುತ್ತಿಲ್ಲ. ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಬೆಂಡಾಗಿದ್ದೇನೆ. ಆರ್ಥಿಕ ಹಾಗೂ ಔದ್ಯೋಗಿಕವಾಗಿ ಗಂಡಿಗೆ ಸರಿಸಮಾನಾಗಿ ದುಡಿಯುತ್ತಿದ್ದರೂ ತಾರತಮ್ಯ ಎಂದು ಕೊರಗುವವರಿಗೂ ಅರುಣಿಮಾಳ ದಿಟ್ಟತನದ ಬದುಕು ದೊಡ್ಡ ವಿಶ್ವಾಸ ತುಂಬಿಕೊಡಬಲ್ಲದು. ಸಮಾಜದ ಹಲವು ಕ್ರೌರ್ಯಗಳಿಗೆ ಬಲಿಯಾಗಿಯೂ ಸಾಧಿಸಬೇಕೆಂಬ ಛಲವುಳ್ಳವರು ಕೂಡ ಅರುಣಿಮಾಳ ಹಾದಿಯನ್ನು ತೆರೆದ ಮನಸ್ಸಿನಿಂದ ನೋಡಬಹುದು.  ಅಂಗವೈಕಲ್ಯವನ್ನು ಮೀರಿ ಮಾಡಿದ ಅರುಣಿಮಾಳ ಸಾಧನೆಯಿಂದ, ವೈಕಲ್ಯ ಮನಸ್ಸಿಗೆ ಸಂಬಂಧಿಸಿದ್ದೇ ಹೊರತು ದೇಹಕ್ಕಲ್ಲ ಎಂಬ ವಿವೇಕವನ್ನು ಇತರರಲ್ಲಿ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಟ್ಟರೆ ಅದುವೇ ಸಾರ್ಥಕ್ಯ.
ಸದ್ಯ ಹೆಣ್ಣು ತನಗೆ ಅರಿವಿಲ್ಲದಂತೇ ಹೇರಿರುವ  “ಮೌಲಿಕಹೊರೆಯನ್ನು ಇಳಿಸಿಕೊಳ್ಳಬೇಕು. ಹೆಣ್ಣೆಂಬುದು ಆತ್ಮದ ಅಂತರ್ದೃಷ್ಟಿಯೆಂಬುದನ್ನು ಅವಿದ್ಯಾವಂತರಿಗಿಂತ, ವಿದ್ಯಾವಂತರಲ್ಲಿಯೇ ಹೆಚ್ಚಾಗಿ ಬೆಳೆಸಬೇಕಿದೆ. ಅತ್ಯಾಚಾರ, ಅನ್ಯಾಯಕ್ಕೆ ಒಳಗಾದವಳು ಒಂದೋ ಸಾಯಬೇಕು. ಇಲ್ಲ, ಸಮಾಜದ ಕಾರುಣ್ಯದೊಳಗೆ ಆತ್ಮವಿಲ್ಲದವಳಾಗಿ ಬದುಕಬೇಕು ಎಂದು ಬಯಸುವ ಸಮಾಜದೆಡೆಗೆ, ಸವಾಲನ್ನು
ಸ್ವೀಕರಿಸುವ, ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಛಾತಿಯನ್ನು ನಮ್ಮ ಕುಡಿಗಳಲ್ಲಿ ಒಡಮೂಡಿಸಬೇಕಿದೆ. ಇದಕ್ಕೆ ಎಲ್ಲ ಹೆಂಗರಳು  ಒಗ್ಗೂಡಬೇಕಿದೆ.

No comments:

Post a Comment