Sunday 22 March 2015

ನಿವೇದನೆಯ ಭಿನ್ನತೆಯೂ, ನಿರೂಪಣೆಯ ಆಪ್ತತೆಯೂ….






 ಮನೋ ಸಾಗರದಲ್ಲಿ ಸದಾ ಭರತ- ಇಳಿತ. ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ, ಬಣ್ಣ, ಧರ್ಮ, ಲಿಂಗ ಹಾಗೂ ವೃತ್ತಿ ಎಂಬ ಪದಗಳು ಕೇವಲ ನಿಮಿತ್ತ ಮಾತ್ರ. ಇವುಗಳ ಸುತ್ತ  ಮೇಲು-ಕೀಳಿನ ಕಲ್ಪನೆಗಳು ಸುಳಿದಾಡದೇ ಹೋದರೆ, ಈ ಎಲ್ಲ ಪದಗಳು ನಿರ್ಜೀವವೇ ಸರಿ.
ಎಲ್ಲೆಲ್ಲಿ ಮನುಷ್ಯ ಎಂಬ ಪ್ರಾಣಿ ಹೆಜ್ಜೆ ಊರಿದ್ದಾನೋ, ಭಾಗಗಳಲ್ಲಿ ಯಾವುದೋ ರೂಪದಲ್ಲಿಯಾದರೂ ಮಹಾನ್ ಕಂದಕಗಳು, ಕುಳಿಗಳು ಬಿದ್ದಿವೆ. ಇದನ್ನು ಕೇವಲ ಸಾಮಾಜಿಕ ನೆಲೆಯಲ್ಲಷ್ಟೇ ನೋಡದೇ, ಮನಃಶಾಸ್ತ್ರೀಯ ದೃಷ್ಟಿಕೋನದಿಂದ ಕಂಡಾಗಷ್ಟೇ  ಧ್ರುವೀಕರಣಗೊಳ್ಳದ ಸತ್ಯಗಳು ಬಯಲಾಗುತ್ತವೆ. ಆಗಷ್ಟೆ ಆಂತರ್ಯದ ಅರಿವನ್ನು ಆಗುಮಾಡಿಕೊಳ್ಳಬಹುದು.  ಇವುಗಳ ಸತತ ಅನ್ವೇಷಣೆಯಿಂದ, ತಥಾಕಥಿತ ಸಂಶೋಧನೆಯ ಉತ್ತರಗಳು ದೊರೆಯದೇ ಹೋಗಬಹುದು. ಆದರೆ, ಈ ಅನ್ವೇಷಣೆ ನಮ್ಮೊಳಗೆ ನಿಜವಾದ ಅರಿವನ್ನು, ಅಂತಃಸತ್ವವನ್ನು ಉಂಟುಮಾಡುತ್ತದೆ.

ಜಾತಿ ಹಾಗೂ ಬಣ್ಣ  ಹುಟ್ಟಿಸಿದ ತಾತ್ಸಾರ, ಒಳತೋಟಿ ದೊಡ್ಡದು. ಜಾತಿ ಹಾಗೂ ಬಣ್ಣದ ವ್ಯಾಖ್ಯಾನ ಸಾಂಸ್ಕೃತಿಕ ಚಹರೆಯಲ್ಲಿ ಸೇರಿಹೋಗಿದೆ.ಇದು ಸಂಸ್ಕೃತಿಯ ನೀರಿನಲ್ಲಿ ಮಲಿನತೆಯ ರೂಪಕವಾಗಿ ಸೇರಿ ಹಲವು ಶತಮಾನಗಳೇ ಕಳೆದಿವೆ. ಮನುಷ್ಯ ತನಗೆ ತಾನೇ ಹೆಣೆದುಕೊಂಡ ನೂರಾರು ಮುಖವಾಡದೊಳಗೆ ಒಮ್ಮೆ ಇಣುಕುವಂತಾದರೆ, ಹಾಗೇ ಇಣುಕಲು, ನಮ್ಮ  ಸ್ವೋಪಜ್ಞತೆ ಅವಕಾಶ ಮಾಡಿಕೊಟ್ಟರೆ. ಅದೇ ಅಕ್ಷರದ ಬಹುದೊಡ್ಡ ಸಾರ್ಥಕತೆ.

ಈಚೆಗೆ ಬಿಡುಗಡೆಯಾದ ಸಂತೋಷ ಗುಡ್ಡಿಯಂಗಡಿ ಅವರ ಮೊದಲ ಕಥಾ ಸಂಕಲನ ಕೊರಬಾಡು ಅಪಾರ ಕಥಾ ಎಳೆಗಳನ್ನು ಓದುಗರ ಮುಂದಿಡುತ್ತದೆ. ಹಾಗೇಯೇ ಜಾತಿ, ವರ್ಗ ಹಾಗೂ ಬಣ್ಣ ಸಂಘರ್ಷದ ಅಮಾನವೀಯ ಮುಖವನ್ನು ತೆರೆದಿಡುತ್ತದೆ. ಕುಂದಾಪ್ರದ ವರಾಹಿ ನದಿ ತೀರದಿಂದ ನಂಜನಗೂಡಿನ ಕಪಿಲಾ ನದಿ ತೀರದವರೆಗೆ ಕಂಡ ನೂರಾರು ಪಾತ್ರಗಳು ಬಹಳ ಸೊಗಸಾಗಿ ಮಾತನಾಡುತ್ತವೆ.  ಹುಟ್ಟಿದ ಹಾಗೂ ಬದುಕು ಕೊಟ್ಟ ನೆಲದ ಸಾಂಸ್ಕೃತಿಕ ಚೈತನ್ಯದ ವಿನ್ಯಾಸವನ್ನು ಅದಿರುವ ಹಾಗೇ ಗ್ರಹಿಸಿ, ಅದರಲ್ಲಿ ಕಥೆಯನ್ನು ಮಥಿಸುವುದು ಅಷ್ಟು ಸುಲಭದ ಸಂಗತಿಯಲ್ಲ.ಅದಕ್ಕೆ ಸೂಕ್ಮ ಸಂವೇದನೆ ಅತ್ಯಗತ್ಯ. ಅದನ್ನು ಸಂತೋಷ ಗುಡ್ಡಿಯಂಗಡಿ ಅವರು ಬಹಳ ಸಲೀಸೆಂಬಂತೆ ಪ್ರಸ್ತುತ ಪಡಿಸಿದ್ದಾರೆ.

ಕುಂದಾಪ್ರ ನೆಲದಲ್ಲಿ ಹುಟ್ಟಿ, ವೃತ್ತಿಯ ಸಲುವಾಗಿ ನಂಜನಗೂಡಿನಲ್ಲಿದ್ದರೂ ಎರಡು ಪ್ರದೇಶಗಳ ಭಾಷೆ, ಸಂಸ್ಕೃತಿ, ಜನರ ಬದುಕು, ಬವಣೆಗಳನ್ನು ಒಳಗಣ್ಣಿನಿಂದ ನೋಡಲು ಸಾಧ್ಯವಾಗಿರುವುದರಿಂದಲೋ ಏನೋ, ಭಾಷೆಯ ಹಂಗಿಲ್ಲದೇ ಅವರ ಕತೆಗಳು ಇಷ್ಟವಾಗುತ್ತ ಹೋಗುತ್ತದೆ. ಕುಂದಾಪ್ರ ಕನ್ನಡ ಹಾಗೂ ನಂಜನಗೂಡಿನ ಗ್ರಾಮ್ಯ ಭಾಷೆಗಳೆರಡು ಇಲ್ಲಿ ಮಾತಾಗಿವೆ. ಅವು ಗ್ರಾಮ್ಯಕ್ಕಿರುವ ಮಿತಿಯನ್ನು ಮೀರಿ, ಓದಿಸಿಕೊಂಡು ಹೋಗುವ ಗುಣವನ್ನು ಸಹಜವಾಗಿಯೇ ಪಡೆದುಕೊಂಡಿವೆ ಎನ್ನಲು ಅಡ್ಡಿಯಿಲ್ಲ.

ಸಂತೋಷ ಗುಡ್ಡಿಯಂಗಡಿ ಅವರು ಮೇಷ್ಟ್ರಾಗಿರುವುದರಿಂದಲೇನೋ ಮಕ್ಕಳನ್ನು ಮೆಲು ಮಾತಿನಿಂದ, ಮಾತನಾಡಿಸಿ, ಕಲಿಸುವಂತೆ, ಸುತ್ತಮುತ್ತ ನಡೆಯುವ ಸೂಕ್ಷ್ಮ ಸಂಗತಿಗಳನ್ನು ತಟ್ಟಿ  ಮಾತನಾಡಿಸಿ, ಪಾತ್ರವಾಗಿಸಿದ್ದಾರೆ. ಅವರ ಕಥಾ ವಸ್ತುವಿನ ಹುಡುಕಾಟಗಳೆಲ್ಲವೂ, ಅಕ್ಷರ ಅಷ್ಟಾಗಿ ಹತ್ತದ ಕೊನೆಯ ಬೆಂಚಿನ ಹಿಂದುಳಿದ ಹುಡುಗರ ಕುರಿತದ್ದೇ ಆಗಿದೆ. ಕತೆಯ ,ಪಾತ್ರಗಳೆಲ್ಲವೂ ದೀನ ದಲಿತರು, ನಿರ್ಗತಿಕರು ಹಾಗೂ ಅಸಹಾಯಕರ ಸುತ್ತವೇ ಹೆಣೆಯಲಾಗಿದೆ ಎಂಬುದು ಇಲ್ಲಿನ ವೈಶಿಷ್ಯ.

ದುರ್ಗಿ, ಕೊರ್ಗು, ದೇವಿ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಪಾತ್ರಗಳಾಗಿಯೇ ಹೊಮ್ಮಿವೆ. ಅಷ್ಟೆಕೇ ಕಥಾ ಸಂಕಲನದ ಅಷ್ಟೂ ಕತೆಗಳಲ್ಲಿ ಬರುವ ಹೆಣ್ಣಿನ ಪಾತ್ರಗಳು ದಿಟ್ಟತನದ ಪ್ರತೀಕ. ಹೆಂಗರುಳಿನ ಸಂತೋಷ ಅವರು ಕತೆಗಾರನಾಗಿ ಸೃಷ್ಟಿಸಿದ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಬಿಂಬಗಳು,  ಬದುಕು ಪ್ರೀತಿಸಿದ ಬಡವರ ಮಕ್ಕಳು ಹಾಗೂ ಸುಂದರಿಯ ಕಾಟ ಕತೆಗಳು ಒಟ್ಟು ಅತಾರ್ಕಿಕ ವ್ಯವಸ್ಥೆಯೆಡೆಗಿನ ಮುಗ್ಧ ಪ್ರಶ್ನೆಗಳಿಂದಲೇ ಸೆಳೆಯುತ್ತದೆ. ದುರ್ಗಿ ಮಗ ದಿಲ್ಲಿಗ್ಹೋಯ್ಬಂದ ಕತೆಯ ಶೀರ್ಷಿಕೆಯು ನೆರೆಮನೆಯ ಹೆಂಗಸರೆಲ್ಲ ಬಾವಿ ಕಟ್ಟೆಯಲ್ಲಿ ಸಹಜವಾಗಿ ಆಡಬಹುದಾದ ಮಾತನ್ನೇ ಶೀರ್ಷಿಕೆಯಾಗಿಸಿ, ಅಲ್ಲಿಯೇ ಒಂದು ಕತೆಯ ಹೃಸ್ವವನ್ನು ಹುಟ್ಟುಹಾಕಿದ್ದಾರೆ.

ಗುಡ್ಡಿಯಂಗಡಿ ಅವರ ಬಹುತೇಕ ಕತೆಗಳಲ್ಲಿ ಕಾವ್ಯ ಕಥನದ ಮಾದರಿಯಿದೆ. ಕತೆಗಳನ್ನು ಓದುತ್ತಿರುವಾಗಲೇ ಕಾವ್ಯದ ಲಹರಿಯೊಂದು ಓದುಗರ ಹಿಡಿತಕ್ಕೆ ದಕ್ಕುವಂತೆ ಭಾಸವಾಗುತ್ತದೆ. ಆದರೆ ಕತೆಗಳನ್ನು ನಾಟಕೀಯ ನೆಲೆಯಲ್ಲಿಯೇ ಆರಂಭಿಸುವ ಅಥವಾ ಸಮಾಪ್ತಿಗೊಳಿಸುವ ಉಮೇದು ಸಂತೋಷ ಅವರಲ್ಲಿ ತುಸು ಹೆಚ್ಚೇ ಎನ್ನುವಂತಿದೆ.  

ಅಜ್ಜಿ ಅಂಗಡಿ ಕತೆಯಲ್ಲಿ ಬರುವ ಚಿಕ್ತಾಯಮ್ಮನ ಪಾತ್ರವೂ ಸಾಕವ್ವ ಪಾತ್ರದ ದೂರದ ಸಂಬಂಧಿಯೆನುವಷ್ಟರ ಮಟ್ಟಿಗೆ ಆಪ್ತವಾಗುತ್ತದೆ.  ದೇವನೂರ ಮಹಾದೇವ ಅವರ ಪ್ರಭಾವಕ್ಕೆ ತೀವ್ರತರದಲ್ಲಿ ಒಳಗಾಗಿದ್ದರೂ, ಸ್ವಂತಿಕೆಯಲ್ಲಿಯೂ, ನಿರೂಪಣೆಯಲ್ಲಿಯೂ, ಕತೆಯನ್ನು ನಿವೇದಿಸಿಕೊಳ್ಳುವುದರಲ್ಲಿಯೂ ಭಿನ್ನವಾಗಿ ನಿಲ್ಲುವ ಮೂಲಕ ಕತೆಗಾರನಾಗಿ ಓದುಗರಿಗೆ ಹತ್ತಿರವಾಗುತ್ತಾರೆ.

ಕುಂದ್ರಾಪ ನೆಲದಲ್ಲಿನ ಸಾಂಸ್ಕೃತಿಕ ವಿನ್ಯಾಸಕ್ಕೆ ಮೆರುಗು ತಂದ ಭೂತಾರಾಧನೆ, ದೈವಾರಾಧನೆ, ಅದು ಹುದುಗಿಸಿಟ್ಟುಕೊಂಡ ಜಾತಿ ಹಾಗೂ ವರ್ಗ ತರತಮಗಳನ್ನು ಬಿಚ್ಚಿಡುತ್ತಲೇ, ಅದರ ಸುತ್ತವೇ ಕತೆ ಹೆಣೆಯುವ ಮಟ್ಟಿಗೆ ಅವರ ಸೃಜನಶೀಲತೆ ಪಕ್ವವಾಗಿರುವುದನ್ನು ಮೊದಲ ಸಂಕಲನದಲ್ಲಿಯೇ ಕಾಣಬಹುದು.

ಜಾಗತೀಕರಣದ ಪ್ರಭಾವದಿಂದಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ವಿದ್ಯೆ ಹಾಗೂ ಉದ್ಯೋಗದಿಂದಾದ ಬದಲಾವಣೆಯ ಬೀಸುಗಾಳಿ ಹಳ್ಳಿಗಳನ್ನು ತಲುಪಿ ಹಲವು ವರುಷಗಳೇ ಸಂದಿವೆ. ಅದು ಸೃಷ್ಟಿಸಿದ ಬದಲಾವಣೆ, ತಲ್ಲಣ ಬೇರೆ ಬೇರೆ ಸ್ವರೂಪ ಪಡೆದು, ಹೊಸ ಕಥಾ ಲೋಕವನ್ನು ತೆರೆದಿಟ್ಟಿದೆ. ಈ ಬದಲಾವಣೆ, ತಲ್ಲಣಗಳ ಜಾಡು ಹಿಡಿದು ಕತೆಯಾಗಿಸಲು ಸದ್ಯ ಸೋತಿರುವ ಕತೆಗಾರ, ಮುಂದಿನ ಪ್ರಯತ್ನದಲ್ಲಿ ಗೆಲ್ಲಲಿ.,


No comments:

Post a Comment